Thursday, 23 January 2014

ಮುನ್ನುಡಿ :‘ವಚನಜ್ಯೋತಿ’ -



ಮುನ್ನುಡಿ

     ‘ವಚನಜ್ಯೋತಿ’ - ಜ್ಯೋತಿಬಾ ಅವತಾಡೆ

ಕನ್ನಡ ಆಧುನಿಕ ವಚನಕಾರರ ಸಾಲಿನಲ್ಲಿ ಈಗ ಹೊಸ ಸೇರ್ಪಡೆ ಬೀಳಗಿಯ ಕವಿ ಜ್ಯೋತಿಬಾ ಅವತಾಡೆಯವರು. ಅವರ 108 ವಚನಗಳ ‘ವಚನಜ್ಯೋತಿ’ ಜ್ಯೋತಿರ್ಲಿಂಗ ಅಂಕಿತದಲ್ಲಿ ನಮ್ಮ ಮುಂದಿದೆ. ವಚನಗಳು ಬದುಕಿನ ಪಾಠದ ಕೈಗನ್ನಡಿಯಂತೆ ನಮ್ಮ ಭಾವಗಳ ಅನಾವರಣ, ಮನಗಳ ಮುನ್ನುಡಿಯಿದ್ದಂತೆ. ವಚನ ಎಂಬುದು ಮಾತಾದರೂ ಅದಕ್ಕೆ ಒಂದು ಮೌಲ್ಯವಿದೆ, ಪಾವಿತ್ರ್ಯತೆಯಿದೆ. ‘ವಚನ’ ಕೊಡುವುದು, ‘ವಚನ’ದಂತೆ ನಡೆಯುವದು, ‘ವಚನ’ ಪಾಲಿಸುವುದು ಇದರ ಮಹತ್ವ ಸಾರಿದರೆ ‘ವಚನ’ವು ಪದ್ಯವಾಗಿ ನಿಲ್ಲುವದು ಕವಿಯ ಶಕ್ತಿಯನ್ನು ಅವಲಂಬಿಸಿದೆ. ಜನರ ನಡುವೆ ಬದುಕಿ, ಕಾಯಕ ಮೌಲ್ಯವನ್ನು ಎತ್ತಿಹಿಡಿದ ಅನೇಕ ಶರಣರು ಬರೆದ ವಚನಗಳು ನಮ್ಮ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ಯಾವ ಅರ್ಥಕೋಶವಿಲ್ಲದೇ, ಯಾರಾದರೂ ತುಂಬಾ ಸುಲಭ, ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಈ ರಚನೆಗಳು ಬಹುಬೇಗನೆ ನಮ್ಮನ್ನು ಸೆಳೆದುಕೊಳ್ಳುತ್ತವೆ.  ಬದುಕಿನ ಪ್ರತಿ ಪಾಠದ ಒಂದು ಅನುಭವವಾಗಿ, ಒಂದು ಮೌಲ್ಯವಾಗಿ ನಿಲ್ಲುವ ವಚನಗಳು ಕನ್ನಡ ಕಾವ್ಯದ ಶಕ್ತಿವಂತ ರಚನೆಗಳು.

ಆಧುನಿಕ ಕಾಲದ ಸಂದರ್ಭ, ಪರಿಸ್ಥಿತಿ, ಬದುಕು, ಬವಣೆ, ಜನರ ಮನೋಸ್ಥಿತಿಯನ್ನು ಕಂಡು ವಿಮುಖಗೊಳ್ಳುವ ಮನಸ್ಸುಗಳನ್ನು ಸರಿದಾರಿಗೆ ತಂದು ಅಂಧಕಾರದ ಮನಸ್ಥಿತಿಗೆ ಬೆಳಕಿನ ಪ್ರತಿಮೆಯಾಗಿ ನಿಲ್ಲುವ ಜ್ಯೋತಿಬಾ ಅವತಾಡೆ ಅವರ ವಚನಗಳು ಸರಳ ರಚನೆಯ ಅತಿ ಸುಂದರ ಪ್ರತೀಕಗಳಾಗಿವೆ.
ಬಸವಾದಿ ಶರಣರ ವಚನಗಳನೋದಿ
ಅರಿತು ನಡೆದರೆ ಗುರುತರವಾದ
ಬದುಕಿನ ದಾರಿ ಖಡಾಖಂಡಿತವಾಗಿ
ಕಂಡೀತೆಂದ ನಮ್ಮ ಜ್ಯೋತಿರ್ಲಿಂಗ

ಬದುಕಿನ ದಾರಿಗೆ ಶರಣರ ವಚನಗಳ ಅರಿವು ನಮ್ಮದಾಗಬೇಕೆನ್ನುವ ಕವಿ ಇಲ್ಲಿ ತಮ್ಮ ವಚನಗಳಲ್ಲಿ ಬದುಕನ್ನು ಹಲವು ಬಗೆಯಲ್ಲಿ ಅರ್ಥೈಸಿದ್ದಾರೆ.
ಎಂದಿಗೂ ಅಂದಾದುಂದಿಯ ಬದುಕು
ಗೆದ್ದಿಲು ಹಿಡಿದ ಬಾಗಿಲು ಪಡಕು

ಬದುಕು ಆದರ್ಶಮಯವಾಗಬೇಕು. ತನ್ನ ಮಿತಿಯನ್ನು ಅರಿತು ಬದುಕಬೇಕು. ಮಿತಿಮೀರಿದ ಬದುಕನ್ನು ಕವಿ ಗೆದ್ದಲು ಹುಳ ಹಿಡಿದ ಬಾಗಿಲಿಗೆ ಹೋಲಿಸಿದ್ದಾರೆ. ಎಷ್ಟೊಂದು ಅರ್ಥಪೂರ್ಣ ಸಾಲುಗಳು.
ಸಾಗುವ ಬದುಕಿಗೆ ಬೇಡ ಬಿಗುಮಾನ
ಬಾಗಿ ನಡೆದರೆ ನೀನು ಬಲುಜಾಣ

ಶರಣರು ಸಾರಿದಂತೆ ಬಾಗಿ ಮಾಗುವ ಚಿತ್ರಣ ಈ ರಚನೆಯಲ್ಲಿದೆ. ಅಹಂಕಾರ, ಬಿಗುಮಾನಗಳು ಮನುಷ್ಯನನ್ನು ಒಂಟಿಯಾಗಿಸುತ್ತವೆ. ಬದುಕಿನ ಸುಖವನ್ನು, ಸಂಭ್ರಮವನ್ನು ಹಂಚಿಕೊಳ್ಳದೇ ಮರಗುವ ಸ್ಥಿತಿ ತಂದೊಡ್ಡುತ್ತವೆ. ಬಳಗದಲ್ಲಿ ಬಾಗಿ ಮನವನ್ನು ಗೆಲ್ಲಬೇಕೆಂದು ಕವಿ ಸಾರಿದ್ದಾರೆ.

ಬದುಕು ಕವಿಗೆ ಬಹಳಷ್ಟು ಕಾಡಿದೆ. ಈ ಸಂಕಲನದ ಬಹುತೇಕ ರಚನೆಗಳು ಬದುಕನ್ನು ಕಂಡರಿಸಿವೆ. ‘ಕಲ್ಲು ಮುಳ್ಳಿನದು ಬದುಕಿನ ದಾರಿ’, ನಂಬಿ ನಡೆಯದಿದ್ದರೆ ತುಂಬಿದ ಬದುಕೆಲ್ಲ ಭಂಗವಾಗಿ ನಿನ್ನ ಬಂಗಾರದ ಬಿಂದಿಗೆ ಬುಡಮೇಲು, ಲಂಗುಲಗಾಮಿಲ್ಲದ ಬದುಕಿನ ಹೊತ್ತು, ಕನ್ನಡಿ ಕೈಯೊಳಗೆ ಸಿಕ್ಕ ಮಂಗನ ಗತ್ತು, ಮುಟ್ಟಲು ಬದುಕಿನ ಘಟ್ಟ ಬೇಕು ದಿಟ್ಟ ಎದೆಗಾರಿಕೆ, ಬೇಕು ಬೇಡಿಕೆಗಳ ಒಲವಿನ ಗೆಲುವೇ ಬದುಕಿನ ಸುಖವು, ಮಳ್ಳನೇನರಿಯುವನು ಬದುಕಿನ ಕಲೆಯ, ಬಾಳಿ ಬದುಕಾಕ ಅರಮನೆಯ ಸಿರಿಯ ಯಾಕ ಬೇಕು. ತಾಳ್ಮೆಯ ಗುಣವೇ ಸಾಧಕ ಬದುಕಿನ ತಾಳಿ, ತಾನು ದುಡಿದು ಮಾಡುವ ಅಡಿಗೆಯ ಸೊತ್ತು, ತನ್ನ ಸಾಧಕ ಬದುಕಿನ ಮುನ್ನಡೆಯ ಸಿರಿ ತುತ್ತು. ಹೀಗೆ ಬದುಕನ್ನು ಹಲವು ವಿಧದಲ್ಲಿ ರೂಪಿಸಿದ ಕವಿ ಕೊನೆಯಲ್ಲಿ ಹೇಳುತ್ತಾರೆ, ಬದುಕಲು ಅರಿಯದಿದ್ದರೆ ಜ್ಯೋತಿರ್ಲಿಂಗನೆಂತು ಒಲಿಯುವನಯ್ಯ, ಜ್ಯೋತಿಲಿಂಗನನ್ನು ಮರೆತು ನಡೆದರೆ ಗತಿ ಕಾಣದೇ ತನ್ನ ಬದುಕೇ ಆಗುವದು ಮೂರಾಬಟ್ಟೆ. ಜ್ಯೋತಿರ್ಲಿಂಗನನ್ನು ಭಜಿಸಿ ಬದುಕಿದರೆ ಸ್ವರ್ಗವು ಕಾಣಲು ಮೂರೇ ಗೇಣು. ಹೀಗೆ ಶರಣರು ಸಾರಿದಂತೆ ಅರಿವು ನಮ್ಮ ಗುರುವಾದ ಮೌಲ್ಯವನ್ನು ಬಹುವಿಧದಲ್ಲಿ ಕವಿ ಜ್ಯೋತಿಬಾ ಅವತಾಡೆಯವರು ಸಾರಿದ್ದಾರೆ.

ವಚನಗಳು ಪರ್ಯಾಯವಾಗಿ ಗಾದೆಗಳಾಗಿ ಗುರುತಿಸಿಕೊಳ್ಳುತ್ತವೆ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ ಠಂಕಿಸಿದ ಗಾದೆಗಳು ಜನಪದ ಗೀತೆಗಳಲ್ಲಿ, ವಚನಗಳಲ್ಲಿ ಧಾರಾಳವಾಗಿ ಬಳಕೆಯಾಗಿವೆ. ಇಲ್ಲೂ ಕವಿ ಅವತಾಡೆ ಅವರು ತಮ್ಮ ರಚನೆಗಳಲ್ಲಿ ಪ್ರಚಲಿತ ಗಾದೆಗಳನ್ನು ಬಳಸಿಕೊಳ್ಳುವ ಜೊತೆಗೆ ಹೊಸ ಹೊಸ ಗಾದೆ ಮಾತುಗಳನ್ನು ಸೃಷ್ಟಿಸಿದ್ದಾರೆ. ‘ಮೊಲವೆದ್ದಾಗ ನಾಯಿ ಹೊರಗೆ ಹೋದಂತೆ’, ‘ಕುಳಿತು ಉಂಡರೆ ಸಿರಿತನದ ಕೇಡು’, ‘ಜಡೆ ಹಾಕಿದರೆ ತಡಿಕೆ’, ‘ಕ್ರೋಧಿಗಳ ಮಾತು ಕದನದ ಹೇತು’, ‘ಬಚ್ಚಿಟ್ಟ ತಟ್ಟೆ ಅನ್ನ ಹಳಸಿತ್ತು’, ‘ಅತಿಯಾದ ನಿದ್ರೆ ದಾರಿದ್ರ್ಯದ ಮೂಲ’ ಹೀಗೆ ಅನೇಕ ಹೊಸ ಹೊಸ ಗಾದೆಗಳನ್ನು ಕವಿ ಇಲ್ಲಿ ಕಂಡರಿಸಿದ್ದಾರೆ.

ಒಟ್ಟಾರೆ ಕವಿ ಜ್ಯೋತಿಬಾ ಅವತಾಡೆಯವರು ಸರಳ ರಚನೆ, ಆರ್ಥಪೂರ್ಣ ಭಾವ, ಆದಿಪ್ರಾಸದ ಲಯ, ನೀತಿ ಬೋಧೆ ಮೊದಲಾದ ವಿಶಿಷ್ಟತೆಯ ಮೂಲಕ ತುಂಬಾ ಮೌಲಿಕವಾದ ವಚನಗಳನ್ನು ನಮಗೆ ಕೊಟ್ಟಿದ್ದಾರೆ. ಕನ್ನಡ ಆಧುನಿಕ ವಚನಗಳ ಸಾಲಿಗೆ ‘ವಚನಜ್ಯೋತಿ’ ಭರವಸೆಯ ಬೆಳಕಾಗಿದೆ. ಸರಳ ಜೀವನ, ಆದರ್ಶ ವ್ಯಕ್ತಿತ್ವ, ಕಾಯಕದ ನಡೆಯಿಂದ ಮೌಲ್ಯಯುತವಾದ ಬದುಕು ರೂಪಿಸಿಕೊಂಡ ಕವಿ ಜ್ಯೋತಿಬಾ ಅವತಾಡೆ ಅವರ ರಚನೆಗಳು ಅವರ ವ್ಯಕ್ತಿತ್ವ ದರ್ಶನದ ರಸಗಟ್ಟಗಳಾಗಿವೆ. ಅವರ ರಚನೆಗಳನ್ನು ಓದುವ ಮೂಲಕ ಎಲ್ಲರ ಬದುಕು ಆದರ್ಶಮಯವಾಗಲಿ ಎಂದು ಶುಭ ಹಾರೈಸುತ್ತೇನೆ.
- ಡಾ. ಪ್ರಕಾಶ ಗ. ಖಾಡೆ, ಬಾಗಲಕೋಟ

Wednesday, 1 January 2014

ನಾಡಿನ ಕವಿಗಳ 'ಹನಿಗೊಂಚಲು'


ಮುನ್ನುಡಿ .

 ನಾಡಿನ ಕವಿಗಳ 'ಹನಿಗೊಂಚಲು'
***********************
ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
                                                     
  ಬಾಗಲಕೋಟೆಯ ಸಾಹಿತ್ಯ ವಲಯದಲ್ಲಿ ತಮ್ಮ ಸರಳ ವ್ಯಕ್ತಿತ್ವ ಮತ್ತು ಕಾಯಕ ನಿಷ್ಠೆಯಿಂದ ಗುರುತಿಸಿಕೊಂಡಿರುವ ಎ. ಎಂ. ಬಿರಾದಾರ ಅವರು ವೃತ್ತಿಯಿಂದ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅವರ ಪ್ರವೃತ್ತಿ ಸಾಹಿತ್ಯ ರಚನೆ ಮತ್ತು ಸಾಹಿತ್ಯದ ಓದು. ಅವರ ಸಂಪಾದಕತ್ವದಲ್ಲಿ ಹೊರಬಂದಿರುವ  `ಹನಿಗೊಂಚಲು' ಚುಟುಕು ಸಂಕಲನಕ್ಕೆ ತನ್ನದೇಯಾದ ವೈಶಿಷ್ಟ್ಯತೆ ಇದೆ. ಸಂಕಲನದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳ ಮತ್ತು ಹೊರನಾಡ ಕನ್ನಡಿಗ ಕವಿ ಕವಿಯತ್ರಿಯರ ಚುಟುಕುಗಳಿವೆ. ಹೀಗೆ ರಾಜ್ಯದ ಕವಿ ಕವಿಯಿತ್ರಿಯರ ಚುಟುಕುಗಳನ್ನು ಒಂದೆಡೆ ಸಂಕಲಿಸಿಕೊಡುವ ಸಾಧನೆಯ ಹಿಂದೆ ಮೂರು ರೀತಿಯ ಶ್ರಮವಿದೆ.
      ಇಂಥದೊಂದು ಸಂಕಲನ ತರುವಲ್ಲಿ ಮೊದಲು ಮಾಧ್ಯಮಗಳ ಮೂಲಕ ಕವಿಗಳಿಗೆ ಚುಟುಕು ಕಳಿಸಲು ಮುಕ್ತ ಆಹ್ವಾನ ನೀಡಬೇಕು. ಹೀಗೆ ಆಹ್ವಾನಕ್ಕೆ ಪ್ರತಿಯಾಗಿ ಬರುವ ಆಸಕ್ತರ ನೂರಾರು ಕವಿತೆಗಳನ್ನು ಒಂದೆಡೆ ಸಂಕಲಿಸಿ ಸಿದ್ಧಪಡಿಸಿ ಅವರಿಗೆ ಆಯ್ಕೆ ಕುರಿತು ಬರೆಯಬೇಕು. ಹೀಗೆ ಬರೆದಾಧ ಮೇಲೆ ಕವಿಗಳ ಕುತೂಹಲವನ್ನು ಬಹಳಷ್ಟು ದಿನ ಕಾಯಿಸದೆ ಸಂಕಲನವನ್ನು ಮುದ್ರಣಕ್ಕೆ ತಂದು ಮುದ್ರಿಸಿ ಮತ್ತೆ ಅವರಿಗೆ ತಲುಪಿಸಬೇಕು. ಈ ಎಲ್ಲ ಶ್ರಮಗಳನ್ನು ನೀಗಬಲ್ಲವರು ಮಾತ್ರ ಇಂಥ ಕಾರ್ಯದಲ್ಲಿ ಜಯಶಾಲಿಗಳಾಗುತ್ತಾರೆ. ಈ ಜಯದ ಹಿಂದೆ ಕನ್ನಡವನ್ನು ಕಟ್ಟುವ ಕಾಯಕವೂ ಸದ್ದಿಲ್ಲದೆ ನಡೆದು ಹೋಗುತ್ತದೆ.
      ಬಿರಾದಾರ ಅವರ ಈ ಸಾಹಸಕ್ಕೆ ಬೆನ್ನೆಲುಬಾಗಿ ನಿಂತವರು ಡಾ. ಮೈನುದ್ದೀನ ರೇವಡಿಗಾರ ಅವರು. ಈ ಹಿಂದೆ ಬಾಗಲಕೋಟೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದ ನೆನಪಿಗಾಗಿ ಇಂಥದೊಂದು ಸಂಕಲನವನ್ನು ಡಾ.ಮೈನುದ್ದೀನ ರೇವಡಿಗಾರ ಅವರು ತಂದು ನಮಗೆಲ್ಲ ಮಾದರಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಎ. ಎಂ. ಬಿರಾದಾರ ಅವರು ಹೊರತರುತ್ತಿರುವ ಈ `ಹನಿಗೊಂಚಲು' ಗರ್ಭದಲ್ಲಿ ರಾಜ್ಯದ ಕವಿ ಕವಿಯಿತ್ರಿಯರ ಕೆನೆಗಟ್ಟಿದ ಸವಿ ಸವಿಯಾದ ತಾಜಾ ಅನುಭವಗಳಿವೆ.
      ಒಂದು ಕಾಲಕ್ಕೆ ಕೇವಲ ಪತ್ರಿಕೆಗಳಲ್ಲಿ ಖಾಲಿ ಉಳಿದ ಸ್ಥಾನವನ್ನು ತುಂಬಬಲ್ಲ ರಚನೆಗಳು ಎನಿಸಿದ್ದ ಈ ಬಗೆಯ ಸಾಹಿತ್ಯ ಇವತ್ತು ಒಂದು ಪ್ರಕಾರವಾಗಿ ಗುರುತಿಸಿಕೊಳ್ಳುತ್ತಿರುವುದನ್ನು ನಾವು ಕಾಣುತ್ತೇವೆ. ಚುಟುಕು ಸಾಹಿತ್ಯ ರಚನೆಯ ದೆಸೆಯಲ್ಲಿ ಆಕರ್ಷಿತರಾಗುತ್ತಿರುವ ಬರಹಗಾರರೊಂದಿಗೆ ಓದುಗ ಓದಬಲ್ಲ ರಚನೆಗಳನ್ನು ಬಯಸುತ್ತಿರುವುದರಿಂದ ಚುಟುಕು ರಚನೆಗಳ ಸುಗ್ಗಿ ಭರ್ಜರಿಯಾಗಿಯೇ ನಡೆಯುತ್ತಿದೆ.
      ಚುಟುಕು ಕವಿತೆಗಳ ಆಕರ್ಷಣೆಗೆ ಅದರ ಆಕೃತಿ ಮತ್ತು ನೇರವಾದ ನಡೆಯೇ ಪ್ರಧಾನ ಕಾರಣ. ಕೆಲ ಸಾಲುಗಳಲ್ಲಿಯೇ ಕವಿ ಹೇಳಬಲ್ಲ ಸಂಗತಿಯನ್ನು ಆಕರ್ಷಕವಾಗಿ ಮನ ಮುಟ್ಟುವಂತೆ ಹೇಳುವುದು ಇದರ ವೈಶಿಷ್ಟ್ಯತೆ. ಈ ಬಗೆಯ ರಚನೆಗಳಿಗೆ ಸೀಮೆ ಗಡಿಗಳ ಕಟ್ಟಳೆ ಇಲ್ಲ. ಯಾರು ಬೇಕಾದರೂ ಯಾವುದೇ ರೀತಿಯಲ್ಲಿ ಯಾವುದೇ ವಸ್ತುವನ್ನು ಇಟ್ಟುಕೊಂಡು ಹೇಳಬಹುದಾಗಿದೆ. ಆದರೆ ಅದು ಸಹೃದಯರನ್ನು ಕೆಲಕ್ಷಣ ಚಿಂತನೆಗೆ ತೊಡಗಿಸಬೇಕು.`ಹನಿಗೊಂಚಲು' ಸಂಕಲನದಲ್ಲಿ ವೈವಿಧ್ಯಮಯ ರಚನೆಗಳಿವೆ. ಪ್ರೀತಿ, ಪ್ರೇಮ, ವಿರಹ, ರಾಜಕಾರಣ, ಶಿಕ್ಷಣ, ವೈದ್ಯಕೀಯ ಹೀಗೆ ಹಲವು ವಿಧದಲ್ಲಿ ಇಲ್ಲಿನ ಚುಟುಕುಗಳು ಸಂಕಲಿತಗೊಂಡಿವೆ. ಇಲ್ಲಿನ ಬಹಳಷ್ಟು ಕಾವ್ಯಗಳ ದ್ರವ್ಯ ಪ್ರೀತಿ ಪ್ರೇಮದ ಬಗೆಗೆ ಇದ್ದರೂ ಪ್ರಕೃತಿಯ ವರ್ಣನೆ, ವಾಸ್ತವಿಕ ಬದುಕಿನ ಚಿಂತನೆ ಮತ್ತು ಪ್ರಸ್ತುತ ಸಾಮಾಜಿಕ ತಲ್ಲಣಗಳನ್ನು ಕಂಡರಿಸಿವೆ.ದಿನ ನೂಕುವ ಪ್ರಕೃತಿಯ ಚಲನೆಯನ್ನು ಒಂದು ಎಳೆಯಲ್ಲಿ ಪೋಣಿಸಿಕೊಡುವ ಅನ್ನಪೂರ್ಣ ಟಿ. ಜಿ. ಅವರ ಚುಟುಕು ಹೀಗಿದೆ-
            ಏನನ್ನು ಸಾರುತಿದೆ
              ಪ್ರಕೃತಿಯ ನಾಮ
              ಖಿನ್ನತೆಯಿಂದ ಪ್ರಸನ್ನತೆಗೆ
              ಆಕೃತದಿಂದ ಕೃತದೆಡೆಗೆ
              ತಿರುಗು ಎಂಬ ನಿಯಮ
      ಅದರಂತೆ ಮಳೆ ಹನಿಗೆ ಮುದಗೊಳ್ಳುವ ಪ್ರಕೃತಿಯ ಪದರು ಪದರುಗಳಲ್ಲಿನ ರೋಮಾಂಚನವನ್ನು ಜಯಲಕ್ಷ್ಮೀ ಎಸ್. ರಾವ್ ಕಂಡರಿಸುವುದು ಹೀಗೆ-
            ಬಿಸಿಲ ಬೇಗೆಯಳಿದು
              ಆರಂಭವಾಯಿತು ಮಳೆ ಹನಿಯ ಸಿಂಚನ
              ಧರೆಯ ತಾಪವಳಿದು
              ಭೂರಮೆಯ ಒಡಲೆಲ್ಲ ರೋಮಾಂಚನ
      ಮೇಲಿನ ಸೂರ್ಯ, ಕೆಳಗಿನ ಭೂಮಿ ಅದೊಂದು ರೀತಿಯಲ್ಲಿ ಕವಿ ಕಾಣುವ ಬಗೆಯೇ ಬೇರೆ. ಇಲ್ಲಿ ದೋಸಾತ್ ಡಿ. ಆಲ್ಮೇಡಾ ರವಿಯನ್ನು ಕೆಣಕುವುದು ಹೀಗೆ-
            ನೋಡಿರಿ ಈ
              ನಾಚಿಕೆಗೇಡಿ ರವಿಯನ್ನು
              ಚುಂಬಿಸುತ್ತಿದ್ದಾನಲ್ಲ
              ಎಡಬಿಡದೆ
              ಮುಂಜಾವಿನಿಂದ ಮುಸ್ಸಂಜೆಯವರೆಗೆ
              ಭೂಮಿಯನ್ನು
      ಪ್ರಕೃತಿಯನ್ನು ಕವಿ ಕಾಣುವ ನೋಟದಲ್ಲಿ ತುಂಬಾ ಆತ್ಮೀಯವಾದ ಮತ್ತು ಪ್ರೀತಿ ಪೂರ್ವಕ ಅನುಭವವಿದೆ.`ಹನಿಗೊಂಚಲು' ಸಂಕಲನದಲ್ಲಿ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು, ಅಲ್ಲಿನ ದುರುಳತನವನ್ನು ಬಹಳಷ್ಟು ರಚನೆಗಳು ಬಯಲಿಗೆಳೆಯುತ್ತವೆ. ಕೆ. ಆರ್. ಉಷಾ ಅವರ-
            ಅಂದಿನ ವೈದ್ಯ
              ಧನ್ವಂತರಿ
              ಇಂದಿನ ವೈದ್ಯ
              ಧನವಂತಾ-ರಿ
      ಎಂಬಲ್ಲಿ ಪದ ಬಳಕೆಯ ಚಾಕ-ಚಕ್ಯತೆಯಲ್ಲಿಯೇ ಧನ್ವಂತರಿ-ಧನಾವಂತಾ-ರಿ ಎಂಬಲ್ಲಿ ಚುಟುಕುಗಳಿಗಿರುವ ಕುಟುಕು ಗುಣವನ್ನು ಪ್ರಕಟವಾಗುತ್ತದೆ.ಪ್ರೀತಿ, ಪ್ರೇಮ, ಸೆಡವು, ಮುನಿಸು, ದಾಂಪತ್ಯ ಬದುಕಿನ ಆಪ್ತ ಅನುಭವಗಳು ಇವನ್ನು ಕವಿ ಕಟ್ಟಿಕೊಡುವಲ್ಲಿ ಮುಜುಗರ ಪಟ್ಟುಕೊಳ್ಳದಿರುವುದು ಇಲ್ಲಿನ ಅನುಭವಗಳ ಹಿಂದಿರುವ ಸಾರ್ವತ್ರಿಕತೆಯೇ ಕಾರಣವಾಗಿದೆ. ಉಮೇಶ ತಿಮ್ಮಾಪುರ ಅವರ-
            ಎಷ್ಟು ಹೊದ್ದರೂ
              ಹೋಗಲಿಲ್ಲ
              ಈ ಹಾಳು ಚಳಿ
              ಅದಕ್ಕಾಗಿ
              ಮುನಿಸಿಕೊಂಡರೂ
              ನುಸುಳಿದ ಅವಳ ಬಳಿ
      ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ತುಂಬಾ ಜನಪ್ರಿಯವಾಗಿರುವ ನಾಣ್ಣುಡಿಯ ಎಳೆ ಈ ಕವಿತೆಯನ್ನು ಸ್ತುತಿಕೊಂಡಿದೆÉ. ಶಿವಾನಂದ ಪೂಜಾರಿಯವರ-
            ಸೆಖೆಯಾದಾಗ
              ನನ್ನವಳು
              ಫ್ಯಾನ್ ಆಗುವಳು
              ಬಹಳ ಹೊತ್ತು
              ಸುತ್ತಿದರೆ
              ಕಾವಾಗುವಳು
      ಎಂಬಲ್ಲಿ ಹನಿಗವಿತೆಗಳಿಗಿರುವ ತೀವ್ರವಾದ ಸೆಳೆತ, ಸಾಲುಗಳಲ್ಲಿರುವ ಜೀವಂತಿಕೆ ಬಹಳ ಕಾಲ ನೆನಪಿನಲ್ಲುಳಿಯುವಂತೆ ಮಾಡುತ್ತದೆ.ಸಂಕಲನದಲ್ಲಿನ ಶ್ರೀಮತಿ ಎಂ. ಆರ್. ಗುದಿಗೇನವರ ಅವರ ಶಿಲ್ಪಿ ಚುಟುಕು ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿನ ಅಸಹಾಯಕತೆಯನ್ನು ಸಾರುತ್ತದೆ.
            ಶಿಲ್ಪಿ ನೀನೆಂದು
              ಸಿಕ್ಕ ಕಲ್ಲುಗಳ ಕೈಗೆ ಕೊಟ್ಟರೆ
              ಎಲ್ಲದರಲೂ
              ನಾ ಮೂರ್ತಿ ಕೆತ್ತಬಲ್ಲೆನೇ
              ಮೃದು ಮೇಣದ ಕಲ್ಲಾದರೆ
              ಬಗೆ ಬಗೆಯ ಸುಂದರ
              ಭಂಗಿಗಳ ಕಟೆದು
              ಭಾವ ಬಿಂಬಿಸಬಲ್ಲೆನು
              ಆದರೆ.....
              ಒಂದು ಉಳಿಯ ಹೊಡೆತಕೆ
              ಹಿಟ್ಟುಗಲ್ಲಾದರೆ
              ಅದರಲಿ ನಾ ಹೇಗೆ ಮೂರ್ತಿ ಕೆತ್ತಲಿ
              ಜೀವ ಕಳೆ ತುಂಬಲಿ
      ಎಂಬಲ್ಲಿ ವ್ಯವಸ್ಥೆಯಲ್ಲಿನ ಗಟ್ಟಿಗೊಳ್ಳದ ಬೇರುಗಳನ್ನು, ಬೆಳೆಯಲಾಗದ ಮರಗಳನ್ನು, ಚಿಗುರಲಾರದ ಕೊರಡನ್ನು ಹೀಗೆ ಒಂದು ಸಾಮಾಜಿಕ ಮುಖವನ್ನು ಒಟ್ಟಂದದಲ್ಲಿ ತೋರಲಾಗದ ವಿಫಲತೆಯ ಬಗೆಗೆ ಆತಂಕವಿದೆ.
      ಒಟ್ಟಾರೆ ಇಲ್ಲಿನ ಬಹಳಷ್ಟು ಚುಟುಕುಗಳು ಪದ ಬಳಕೆಯ ಶೈಲಿಯ ಚೆಂದದಿಂದ ಆಯ್ದುಕೊಂಡ ವಿಷಯ ವಸ್ತುವಿನ ಸಾರ್ವತ್ರಿಕತೆಯಿಂದ ಚಿಂತನೆಗೆ ತೊಡಗಿಸುವ ಗಟ್ಟಿತನದಿಂದ ತೀವ್ರವಾಗಿ ಗಮನ ಸೆಳೆಯುತ್ತವೆ. ಚುಟುಕುಗಳ ಕುರಿತು ಅಧ್ಯಯನ ನಡೆಸುವ ಕನ್ನಡ ಅಭ್ಯಾಸಿಗಳಿಗೆ ಎ. ಎಂ. ಬಿರಾದಾರ `ಹನಿಗೊಂಚಲು' ಮೂಲಕ ಒಂದು ವಿಶಿಷ್ಟವಾದ ಜೇನುಗೂಡು ಕಟ್ಟಿಕೊಡುತ್ತಾರೆ. ರಾಜ್ಯದ ನಾನಾ ಮೂಲೆಗಳ ಹೂ ಪರಿಮಳಗಳ ಸವಿ ಹೊತ್ತು ಒಂದೆಡೆ ಕೂಡಿ ಜೇನಾಗಿ ಸವಿಯಾಗಿ ಬೆರೆತುಕೊಂಡಿರುವ ಈ `ಹನಿಗೊಂಚಲು' ನಾಡವರ ಬಾಯಲ್ಲಿ ಸವಿಯುಣಿಸುವ ಸಾರ್ಥಕತೆಯಲ್ಲಿ ಬಿರಾದಾರ ಅವರ ಶ್ರಮದ ಹೆಚ್ಚುಗಾರಿಕೆ ಇದೆ. ಈ ಕಾರ್ಯಕ್ಕಾಗಿ ಅವರನ್ನು ನಾನು ಹೃದಯತುಂಬಿ ಶುಭ ಹಾರೈಸುತ್ತೇನೆ.*
·       ಡಾ. ಪ್ರಕಾಶ ಗ. ಖಾಡೆ
Posಣeಜ bಥಿ ಆಡಿ.Pಡಿಚಿಞಚಿsh ಉ. ಏhಚಿಜe ಚಿಣ 05:08